ಕವಿತೆ
ನಾನು ಮನುಷ್ಯನಲ್ಲ..?
ಮಂದಿರದ ಮೇಲೆ ಹಬ್ಬಿದ ಬಳ್ಳಿ
ಹಸಿರು ಬಣ್ಣದ್ದೆಂದು ಕುಡಿ ಚಿವುಟಿದ
ಮತಿಹೀನ ನಾನು
ಮಸೀದಿಯ ಮುಂಬಾಗಿಲನಲ್ಲಿ ಗೂಡು ಕಟ್ಟಿದ
ಕೆಂಜಿರುವೆ ಕೇಸರಿ ಮೈಯದೆಂದು
ರೆಕ್ಕೆ ಮುರಿದ ಧರ್ಮಾಂಧ ನಾನು
ಶಿಖರದಿ ನೆಟ್ಟ ಶಿಲುಬೆ ಕೆತ್ತಿ ಕೊಟ್ಟ
ಉಳಿ ಬಾಚಿ ಕೈಗಳಿಗೆ ಮೊಳೆ
ಹೊಡೆದ ಧರ್ಮಮೋಹಿ ನಾನು
ಎಲೆ ಬಳ್ಳಿಯೇ ಇನ್ನೂ
ಹೂ ಹಣ್ಣು ಕೊಡುವೆಯಾ?
ಕೊರಳಿಗುರುಳಾಗಬಾರದೆ?
ಇರುವೆಯ ಸಾಲೇ
ಸಕ್ಕರೆಯ ಸಿಹಿಗುಣ ಬಿಡಲಾರೆಯಾ?
ವಿಷದ ಕೊಂಡಿಯಲಿ ಕಚ್ಚಬಾರದೆ?
ಮರದ ನೆರಳೇ ನನಗಿನ್ನೂ
ಜಾಗ ಉಳಿಸಿರುವೆಯಾ?
ಕೊಂಬೆ ಮುರಿದು ತಲೆ ಸೀಳಬಾರದೆ?
ಧರ್ಮಮಾಯೆಯಲಿ ಸಿಲುಕಿ
ಜೀವದಯೆ ಮರೆತ ನಾನಿನ್ನೂ
ಮನುಷ್ಯನೇ? ಅಲ್ಲ; ಸ್ವಯಂಶತೃ.
Comments
Post a Comment